ಎಂ.ಎನ್.ಕೆ. ಮೂವೀಸ್ ಲಾಂಛನದಲ್ಲಿ, ಶ್ರೀಮತಿ ಭಾರತಿ ದೇವಿ ಅರ್ಪಿಸಿರುವ, ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ನಟಿಸಿರುವ ಚಿತ್ರ ‘ಮುಕುಂದ ಮುರಾರಿ. ಈ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಖ್ಯಾತ ವಿತರಕ ಎಂ.ಎನ್. ಕುಮಾರ್ ಮತ್ತು ಕನ್ನಡದಲ್ಲಿ ಸರಿಸುಮಾರು ಇಪ್ಪತ್ತಮೂರು ಸಿನಿಮಾಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ಅವರು ಜಂಟಿಯಾಗಿ ನಿರ್ಮಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರ ನಿರ್ಮಾಣದಿಂದ ದೂರ ಉಳಿದಿದ್ದ ಜಯಶ್ರೀ ದೇವಿ ಅವರು ಮುಕುಂದ ಮುರಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದಿದ್ದಾರೆ. ಹಬ್ಬ, ಶ್ರೀ ಮಂಜುನಾಥ ಮುಂತಾದ ಏಳಕ್ಕೂ ಹೆಚ್ಚು ಮಲ್ಟಿ ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿ ಹೆಸರು ಮಾಡಿದ್ದ ಜಯಶ್ರೀ ದೇವಿ ಅವರ ಮುಂದಾಳತ್ವದಲ್ಲಿ ‘ಮುಕುಂದ ಮುರಾರಿ’ ನಿರ್ಮಾಣಗೊಂಡಿರುವುದು ವಿಶೇಷ.
ಹಿಂದಿಯ ಓ ಮೈ ಗಾಡ್ ಚಿತ್ರದ ಕನ್ನಡ ಅವತರಣಿಕೆ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿ ಎಲ್ಲರಿಗೂ ಇಷ್ಟವಾಗುವಂತೆ ‘ಮುಕುಂದ ಮುರಾರಿ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದ ಕಿಶೋರ್. ವಿಕ್ಟರಿ, ಅಧ್ಯಕ್ಷದಂತಹ ಯಶಸ್ವೀ ಸಿನಿಮಾಗಳನ್ನು ಕೊಟ್ಟಿರುವ ನಂದ ಕಿಶೋರ್.
ಆಸ್ತಿಕ ಮತ್ತು ನಾಸ್ತಿಕರ ನಡುವಿನ ವಿಭಿನ್ನ ಕಥಾ ಹಂದರ ಮುಕುಂದ ಮುರಾರಿಯದ್ದಾಗಿದೆ. ಈ ಚಿತ್ರದಲ್ಲಿ ಸುದೀಪ್ ಭೂಲೋಕದ ಮುರಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮುಕುಂದ ಮುರಾರಿ ಚಿತ್ರದ ಮೂರು ಹಾಡು ಹೊಸ ಬಗೆಯ ಸಂಚಲನವನ್ನು ಉಂಟುಮಾಡಿದೆ.
ಎಂ.ಎನ್. ಕುಮಾರ್ ನಿರ್ಮಾಣದ ‘ಮುಕುಂದ ಮುರಾರಿ’ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಉಪೇಂದ್ರ ಮತ್ತು ಸುದೀಪ್ ಅವರೊಂದಿಗೆ ನಿಖಿತಾ, ಭಾವನಾ, ರಚಿತಾರಾಮ್, ಅವಿನಾಶ್, ದೇವರಾಜ್, ರವಿಶಂಕರ್, ಪ್ರಕಾಶ್ ಬೆಳವಾಡಿ, ತಬಲಾ ನಾಣಿ, ಇಶಿತಾ ವ್ಯಾಸ್, ಶಿವರಾಮ್, ಮೋಹನ್ ಜುನೇಜ, ಡಿಂಗ್ರಿ ನಾಗರಾಜ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.
ಸುಧಾಕರ್ ಎಸ್. ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಯೋಗಾನಂದ ಮುದ್ದಾನ್ ಸಂಭಾಷಣೆ, ಡಾ. ಕೆ. ರವಿವರ್ಮ ಸಾಹಸ, ಮುರಳಿ, ಎ. ಹರ್ಷ ನೃತ್ಯ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಅರುಣ್ ಕುಮಾರ್ ಸಹ ನಿರ್ದೇಶನ, ನರಸಿಂಹ ಜಾಲಹಳ್ಳಿ ನಿರ್ಮಾಣ ಮೇಲ್ವಿಚಾರಣೆ ‘ಮುಕುಂದ ಮುರಾರಿ’ ಚಿತ್ರಕ್ಕಿದೆ.